ಬಿಡುಗಡೆಗೊಂಡ ಗೋಸ್ವಾಮಿ : ನ್ಯಾಯಾಲಯದ ಮೇಲೆ ನಂಬಿಕೆ ಇಡಬಹುದೇ ಸ್ವಾಮಿ?

ಬರಹ : ಉಮರ್ ಫಾರೂಕ್ ಬಾಗಲಕೋಟೆ

Suicide note of Anvay Nayk

2018ರ ಮೇ ತಿಂಗಳಲ್ಲಿ ವಾಸ್ತುಶಿಲ್ಪಿ ಅನ್ವಯ್ ನಾಯಕ್ ಮತ್ತು ಆತನ ತಾಯಿ ಕುಮುದ್ ನಾಯಕ್ ಅಲಿಬಾಗ್ ನಲ್ಲಿರುವ ಅವರ ಬಂಗಲೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾದರೂ ಕುಮುದ್ ನಾಯಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತಾಗಿತ್ತು. ಆ ದಿನ ಅವರ ಶವ ಸೋಫಾದ ಅಡಿ ಪತ್ತೆಯಾಗಿದ್ದರೆ, ಅನ್ವಯ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು! ಅದೇ ಸ್ಥಳದಲ್ಲಿ ಪೊಲೀಸರಿಗೊಂದು ಸಿಕ್ಕ ಪತ್ರದಲ್ಲಿ "ಅರ್ನಬ್ ಗೋಸ್ವಾಮಿ, ಫಿರೋಜ್ ಮತ್ತು ನಿತೀಶ್ ಅವರು ನನಗೆ ಕೊಡಬೇಕಾಗಿದ್ದ 5.40 ಕೋಟಿ ರೂಪಾಯಿ ಬಾಕಿ ಹಣ ಪಾವತಿಸಿಲ್ಲ ಹಾಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಅನ್ವಯ್ ಹೆಸರಿನಲ್ಲಿ ಪತ್ರ ಬರೆಯಲಾಗಿತ್ತು! ಈ ಪ್ರಕರಣದ ತನಿಖೆ ನಡೆಸಿದ್ದ ರಾಯಗಡ ಪೊಲೀಸರು ಆರೋಪಿ ಅರ್ನಬ್ ವಿರುದ್ಧ ಸಾಕ್ಷಾಧಾರಗಳ ಕೊರತೆಯಿಂದ 2019ರಲ್ಲಿ ಪ್ರಕರಣವನ್ನು ಮುಚ್ಚಿಹಾಕಿದ್ದರು. ಆದರೆ ಪಟ್ಟು ಬಿಡದ ಅನ್ವಯ್ ನಾಯಕ್ ಮಗಳು ಅದ್ನ್ಯಾ ನಾಯಕ್ ಪ್ರಕರಣದ ಕುಲಂಕುಶ ತನಿಖೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಪ್ರಕರಣದ ತನಿಖೆಯನ್ನು ಮತ್ತೇ ಆರಂಭಿಸಿದ ಸಿಐಡಿ ಇಲಾಖೆ ಬುಧವಾರ ಬೆಳಗ್ಗೆ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿತ್ತು. ಬಂಧನವಾದ ನಂತರ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಗೋಸ್ವಾಮಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತಲ್ಲದೆ ಸರ್ವೋಚ್ಚ ನ್ಯಾಯಾಲಯ ವೈಯಕ್ತಿಕ ಸ್ವಾತಂತ್ರ್ಯ ಎತ್ತಿ ಹಿಡಿಯುವಂತೆ ಹೈಕೋರ್ಟುಗಳಿಗೆ ಸೂಚಿಸಿದೆ. ಅಷ್ಟೇ ಏಕೆ ನಾವು ಆತನ ಚಾನೆಲ್ ನೋಡದಿದ್ದರಾಯ್ತು ಎಂದಿದೆ.

ಸ್ವಾಮಿ ಅರ್ನಬ್ ಜೈಲುಪಾಲಾಗಿದ್ದ ಆತನ ಚಾನೆಲ್ನಲ್ಲಿ ಕಿರುಚಾಡಿ ಅರಚಾಡಿ ಜಾತಿ ಧರ್ಮಗಳ ಮಧ್ಯೆ ದ್ವೇಷದ ಬೀಜ ಬಿತ್ತುತ್ತಿರುವುದಕ್ಕಾ ಅಲ್ಲ. ಟಿ ಆರ್ ಪಿ ವಿಷಯದಲ್ಲಿ ಭಾರಿ ಹಗರಣ ಮಾಡಿಕೊಂಡಿದ್ದಕ್ಕಾಗಿಯೂ ಅಲ್ಲ. ಆತ ಜೈಲು ಸೇರಿದ್ದು ಕೊಲೆ ಪಾತಕಿಯಾಗಿ, ಕೊಲೆಗೆ ಪ್ರಚೋದನೆ ನೀಡಿದ್ದಕ್ಕಾಗಿ, ಇದು ವೈಯಕ್ತಿಕ ಸ್ವಾತಂತ್ರ್ಯವೇ?
ಇಂತಹ ತೀರ್ಪುಗಳಿಂದ ದೇಶವಾಸಿಗಳು ನ್ಯಾಯಾಂಗದ ಮೇಲಿರುವ ಗೌರವ, ವಿಶ್ವಾಸ ಉಳಿಸಿಕೊಳ್ಳುವರೇ?

ಅದೇಗೆ ಸಾಧ್ಯ? 1992, ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ಹಠಾತ್ತನೇ ಬೀಸಿದ ಸುಂಟರಗಾಳಿಗೆ ಬಾಬ್ರಿ ಮಸೀದಿ “ಆಕಸ್ಮಿಕ”ವಾಗಿ ಬಿತ್ತು. ಅದನ್ನು ಯಾರು ಕೆಡವಲಿಲ್ಲ. ಕೆಡುವುದಕ್ಕಾಗಿ ರಥಯಾತ್ರೆ, ಟೊಯೋಟಾ ಯಾತ್ರೆ ಯಾರು ಮಾಡಿಯೂ ಇಲ್ಲ. ಅಲ್ಲವೇ?
2002 ರ ಗುಜರಾತ್ ನರಮೇಧದಲ್ಲಿ ಸರ್ದಾರಪುರ ಗ್ರಾಮದ ‘ಇಬ್ರಾಹಿಂ ಶೇಕ್’ ಎಂಬುವವರ ಮನೆಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ 22 ಮಹಿಳೆಯರು ಸೇರಿದಂತೆ ಒಟ್ಟು 33 ಜನರನ್ನು ಜೀವಂತ ದಹಿಸಿದ ಕೊಲೆಗಡುಕರನ್ನು ಸಮಾಜಸೇವೆ ಮಾಡಿ ಎಂದು ಜಾಮೀನು ಕೊಟ್ಟಿರಲ್ಲವೇ.. ಆ ಕೊಲೆಗಡುಕರು ಸಮಾಜಸೇವೆಯ ಹೆಸರಿನಲ್ಲಿ ಮತ್ತಷ್ಟು ಅಮಾಯಕರ ಜೀವ ಹಿಂಡಬೇಕೆ?

ಅಷ್ಟೇ ಏಕೆ? ಕಂಬಾಲಪಲ್ಲಿಯಲ್ಲಿ ಅಮಾಯಕ ದಲಿತರನ್ನು ಜೀವಂತ ದಹಿಸಿದ ಆರೋಪಿಗಳನ್ನು ದೋಷಮುಕ್ತಗೊಳಿಸಿದರಲ್ಲವೇ…
ಅಂದು 7 ಜನ ದಲಿತರು ತಮ್ಮ ಮನೆಯೊಳಗೆ ಹೋಗಿ ತಾವೇ ಹೊರಗಿನಿಂದ ಚಿಲಕ ಹಾಕಿಕೊಂಡು, ತಾವೇ ಮನೆ ಮೇಲೆ ಹೊರಗಿನಿಂದ ಹುಲ್ಲು ತುಂಬಿ, ತಾವೇ ಸೀಮೆಎಣ್ಣೆ, ಪೆಟ್ರೋಲ್ ಸುರಿದುಕೊಂಡು, ತಾವೇ ಕಡ್ಡಿ ಕೀರಿ ಬೆಂಕಿ ಹಚ್ಚಿಕೊಂಡು ಕಿರುಚಾಡಿ, ಅರಚಾಡಿ ಅಮ್ಮಾ, ಅಯ್ಯೋ ಕಾಪಾಡಿ ಎಂದು ಕೂಗಾಡಿ ವಿಧಿಯಿಲ್ಲದೇ ಬೆಂಕಿಗಾಹುತಿಯಾಗಿ ಕಾರಕಲಾದರಲ್ಲವೇ? ಅದಕ್ಕಾಗಿ ಆರೋಪಿಗಳನ್ನು ನೀವು ದೋಷಮುಕ್ತಗೊಳಿಸಿದಿರಲ್ಲವೇ?

ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವ ಮಾತು ಹಳೆಯದಾಯಿತೇನೋ? ಇನ್ನೇನೂ ಸರ್ವಾಧಿಕಾರ ನೋಡಲಿಕ್ಕಿದೆ! ಸಫೂರಾ ಝರ್ಗರ್ ಎನ್ನುವ ತುಂಬು ಗರ್ಭಿಣಿಗೆ 3 ತಿಂಗಳವರೆಗೆ ಜಾಮೀನು ನೀಡದ ನ್ಯಾಯಾಲಯಗಳು ಕೊಲೆಗಡುಕ ಗೋಸ್ವಾಮಿಗೆ 7 ದಿನದೊಳಗೆ ಜಾಮೀನು ನೀಡುತ್ತಾರಂದ್ರೆ ನಾವೂ ನ್ಯಾಯಾಲಯದ ಮೇಲೆ ನಂಬಿಕೆ ಇಡಬೇಕೆ?

Leave a comment